ಹಿರಿಯ ಯಕ್ಷಗಾನ ತಜ್ಞ - ಯಕ್ಷಾನುಭವಿ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಜುಲೈ 21 , 2016
|
ಜುಲೈ 23 , 2016
|
ಹಿರಿಯ ಯಕ್ಷಗಾನ ತಜ್ಞ - ಯಕ್ಷಾನುಭವಿ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ
ಬ್ರಹ್ಮಾವರ :
ಬಡಗುತಿಟ್ಟು ಅದರಲ್ಲೂ ಮಟ್ಪಾಡಿ ಹಾರಾಡಿ ತಿಟ್ಟನ್ನು ವಿಶೇಷವಾಗಿ ಕರಗತ ಮಾಡಿಕೊಂಡು ಹಿರಿಯ ತಲೆಮಾರಿನ ಖ್ಯಾತ ವಿಮರ್ಶಕರಾಗಿ ಗುರುತಿಸಿಕೊಂಡ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ.
ಬಿಳಿಯ ಅಂಗಿ, ಮುಂಡು ಪಂಚೆ ಮೈಮೇಲೆ ಶಾಲು ತಾಂಬೂಲ ಸವಿದ ಬಾಯಿ ಸಣಕಲು ಶರೀರದ ಸುಬ್ಬಣ್ಣ ಭಟ್ಟರನ್ನು ಅರಿಯದವರು ಯಕ್ಷಗಾನ ರಂಗದಲ್ಲಿ ಬಹುತೇಕ ವಿರಳ ಎನ್ನಬಹುದು. ಹಾರಾಡಿ ಮಟ್ಪಾಡಿ ತಿಟ್ಟು ಮಟ್ಟುಗಳ ಬಗ್ಗೆ ಅಧಿಕಾರವಾಣಿಯಿಂದ ಹೇಳಬಲ್ಲ ದಿವಂಗತ ಎಂ. ಎಂ. ಹೆಗ್ಡೆ, ಪ್ರೋ. ಬಿ. ವಿ. ಆಚಾರ್ಯರ ನಂತರ ಇನ್ನೊಬ್ಬರೆಂದರೆ ಅದು ಸುಬ್ಬಣ್ಣ ಭಟ್ಟರು. ಯಾವುದೇ ಪ್ರಚಾರ ಬಯಸದೆ ತೆರೆಯ ಹಿಂದೆ ಇದ್ದು ಸುಮಾರು ಮುಕ್ಕಾಲು ಶತಮಾನಗಳ ಕಾಲ ಬಡಗುತಿಟ್ಟು ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಅಪಾರ.
ಯಕ್ಷಗಾನಕ್ಕೆ ಸಂಬಂದಪಟ್ಟ ಯಾವುದೇ ಗೋಷ್ಟಿ, ವಿಚಾರ ಸಂಕಿರಣ ಪ್ರಯೋಗವಿರಲಿ ಅಲ್ಲಿ ಭಟ್ಟರು ಅನಿವಾರ್ಯ. ಅಲ್ಲಿಯೂ ಕೂಡ ಅವರ ಮಾತಿಗೆ ಮಾನ್ಯತೆ. ಬಣ್ಣದ ಕಮ್ಮಟ, ವೇಷ ಹಂಚುವಿಕೆ, ಜೋಡಾಟ ಇಲ್ಲಿ ಎಲ್ಲಿಯೂ ಸುಬ್ಬಣ್ಣ ಭಟ್ಟರನ್ನು ಮೀರಿ ನಡೆದವರಿಲ್ಲ. ಶ್ರೇಷ್ಠ ಮದ್ದಳೆಗಾರರಾದ ಇವರು ಜಾನುವಾರುಕಟ್ಟೆ ಭಾಗವತರು, ನೀಲಾವರ ರಾಮಕೃಷ್ಣಯ್ಯ, ಮರವಂತೆ ದಾಸರ ಪದ್ಯಕ್ಕೆ ಮದ್ದಳೆ ನುಡಿಸಿದ್ದಾರೆ. ಶ್ರೇಷ್ಠ ವಿಮರ್ಶಕರಾದ ಇವರು ಹವ್ಯಾಸಿ ರಂಗಭೂಮಿ ಕಂಡ ಸವ್ಯಸಾಚಿ ಕಲಾವಿದರು. ಬಡಗುತಿಟ್ಟಿನ ಎಲ್ಲಾ ವಿಬಾಗದಲ್ಲಿ ಆಳವಾದ ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದ ಇವರು ದೇಶ ವಿದೇಶಗಳಲ್ಲಿ ಆ ಕಾಲದಲ್ಲಿ ಯಕ್ಷಗಾನದ ಕಂಪನ್ನು ಮೂಡಿಸಿದವರು. ಸ್ವತ ಹೆಸರಿಗೆ ತಕ್ಕ ಒಳ್ಳೇಯ ಬಣ್ಣಗಾರಿಕೆಯಲ್ಲಿ ಪಳಗಿ ಶ್ರೇಷ್ಠ ಪ್ರಸಾದನ ತಜ್ಞರೆಂದು ಗುರುತಿಸಿಕೊಂಡಿದ್ದಾರೆ.
ಯಕ್ಷಗಾನದ ವಿವಿದ ಮಜಲುಗಳಲ್ಲಿ ಕೈಯಾಡಿಸಿ ಜೋಡಾಟದ ತೀರ್ಪುಗಾರರಾಗಿಯೂ ಪರಿಣತಿ ಪಡೆದ ಇವರನ್ನು ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬದ ಪ್ರಶಸ್ತಿ, ಅಜಪುರ ಕರ್ನಾಟಕ ಸಂಘದ ಸುವರ್ಣ ಪ್ರಶಸ್ತಿ, ಗುಂಡ್ಮಿ ಕಾಳಿಂಗ ನಾವಡರ ದಶಮ ಪುಣ್ಯತಿಥಿ ಸನ್ಮಾನ ಸಹಿತ ಹಲವಾರು ಸನ್ಮಾನಗಳು ಅವರಿಗೆ ಸಂದಿದೆ. ಹರಾಡಿ ಮಟ್ಪಾಡಿತಿಟ್ಟುಗಳಬಗ್ಗೆ ಅದಿಕಾರವಾಣಿಯಿಂದ ಮಾತನಾಡಬಲ್ಲ ಭಟ್ಟರ ನಿದನದಿಂದ ಬಡಗುತಿಟ್ಟು ಯಕ್ಷಗಾನ ವಿಮರ್ಶಾಕ್ಷೇತ್ರ ಬಡವಾಗುವುದರೊಂದಿಗೆ ಈ ಪಾರಂಪರಿಕ ತಿಟ್ಟಿನ ಬಗ್ಗೆ ಅದಿಕಾರವಾಣಿಯಿಂದ ಮಾತನಾಡಬಲ್ಲ ಇನ್ನೊಬ್ಬ ವ್ಯಕ್ತಿ ಇಲ್ಲವೆನ್ನಬಹುದಾಗಿದೆ.
|
|
|